ಯುವಕರು ಯೋಗ ಆಟೋಟ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು -ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ.
ಯೋಗೋತ್ಸವ-2025ರ ಅಂಗವಾಗಿ ರಾಜ್ಯ ಮಟ್ಟದ ಚಿಂತನಾಗೋಷ್ಠಿ-ಯೋಗ ಪ್ರದರ್ಶನಕ್ಕೆ ಚಾಲನೆ
ಯುವಕರು ಯೋಗ ಆಟೋಟ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು
-ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ.
ದೈನಂದಿನ ಒತ್ತಡದ ಬದುಕಿನ ಮಧ್ಯೆಯೇ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಲು, ಯೋಗ, ಆಟೋಟಗಳು, ಓಟ, ನಡಿಗೆ, ನೃತ್ಯ ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಯಾಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಹಯೋಗದಲ್ಲಿ ಭಾನುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾದ ಯೋಗೋತ್ಸವ-2025ರ ಅಂಗವಾಗಿ ರಾಜ್ಯ ಮಟ್ಟದ ಚಿಂತನಾಗೋಷ್ಠಿ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಸಂಸ್ಕøತಿ ಹಾಗೂ ಪರಂಪರೆಯಲ್ಲಿ ಯೋಗಕ್ಕೆ ತನ್ನದೇಯಾದ ಮಹತ್ವವಿದೆ. ಇಡೀ ವಿಶ್ವವೇ ಇಂದು ಯೋಗ ದಿನವನ್ನು ಆಚರಿಸುತ್ತದೆ. ಅಬಾಲವೃದ್ಧರಾದಿಯಾಗಿ ಯೋಗ ಪ್ರತಿನಿತ್ಯ ಜೀವನದ ಭಾಗವಾಗಿಸಿಕೊಂಡು ಸದೃಢ ಆರೋಗ್ಯ ಹೊಂದಬೇಕು.
ಯೋಗದಿಂದ ಮನಸ್ಸು ಮತ್ತು ದೈಹಿಕ ಸದೃಢತೆ ಹೊಂದುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆಯಬಹುದು. ದೇಹದ ಆರೋಗ್ಯದ ಕುರಿತಾಗಿ ಜ್ಞಾನಿಗಳು ಸಾಧು ಸತ್ಪುರುಷರ ಈ ಸಮಾಜಕ್ಕೆ ತಮ್ಮ ಹಿತ ನುಡಿಗಳ ಮೂಲಕ ನಮಗೆ ತಿಳುವಳಿಕೆ ಮೂಡಿಸಿದ್ದಾರೆ. ಆರೋಗ್ಯಯುತ ಜೀವನಕ್ಕಾಗಿ ಯೋಗ ಎಂಬುದು ನಮ್ಮ ಪುರಾತನರಿಂದ ಬಂದ ಬಳುವಳಿಯಾಗಿದೆ. ಆರೋಗ್ಯಆಸ್ತಿ, ಸಂಪತ್ತನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಎರಡು ದಿನಗಳ ಕಾಲ ಮಕ್ಕಳಿಗಾಗಿಯೇ ರಾಜ್ಯ ಮಟ್ಟದ ಯೋಗೋತ್ಸವ ಕಾರ್ಯಕ್ರಮವನ್ನು ನಮ್ಮ ಜಿಲ್ಲೆಯಲ್ಲಿ ಆಚರಿಸಲಾಗುತ್ತಿದೆ. ಅಕಾಡೆಮಿಯು ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಅವರ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತದೆ. ಗ್ರಾಮೀಣ ಹಾಗೂ ಬಡ ಕುಟುಂಬದ ಮಕ್ಕಳಿಗೆ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಮಾತನಾಡಿ, ನಾಡಿನ ಮಕ್ಕಳ ಅವರ ಸೃಜನಶೀಲ ವ್ಯಕ್ತಿತ್ವ ಬೆಳೆಸುವ ನಿಟ್ಟಿನಲ್ಲಿ ಅಕಾಡಮಿ ತನ್ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿಕೊಂಡು ಆ ದಿಸೆಯಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಮಕ್ಕಳು ಬೆಳಕಾಗಿ ಬೆಳಗಬೇಕಾದರೆ ಅವರಲ್ಲಿಡಗಿರುವ ಸೂಪ್ತ ಪ್ರತಿಭೆಗೆಗೆ ನೀರೆರೆಯಬೇಕು. ಯೋಗಮಯ ಜೀವನ ನಡೆಸುವ ಮೂಲಕ ಆರೋಗ್ಯಯುತ ಜೀವನ ಕಾಯ್ದುಕೊಳ್ಳಬೇಕು.ಆತ್ಮವಿಶ್ವಾಸದಿಂದ ಗುರಿ ಸಾಧನೆಯಡೆಗೆ ಸಾಗಿ ಮಕ್ಕಳು ಉತ್ತಮ ಜೀವನವನ್ನು ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು.ಆತ್ಮ ವಿಶ್ವಾಸ ಹೊಂದಿದವರು ಜಗತ್ತಿನ ಲಕ್ಷಾಂತರ ಜನರಿಗೆ ಶಕ್ತಿ ತುಂಬುವ ಚಿಂತನ ಶಕ್ತಿಗಳಾಗಿ ಬೆಳೆಯಬಹುದು. ಆ ನಿಟ್ಟಿನಲ್ಲಿ ಬೆಳೆದು ಬೆಳಗಬೇಕು.ಯೋಗ ಅಳವಡಿಸಿಕೊಂಡು ನಿರೋಗಿಯಾಗಿ ಮಾನಸಿಕ ನೆಮ್ಮದಿ ಹೊಂದಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಮಾತನಾಡಿ, ಋಣಾತ್ಮಕ ವಿಚಾರಗಳ ತೊಲಗಿಸಿ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಯೋಗ ಅತ್ಯಂತ ಸಹಕಾರಿಯಾಗಿದೆ. ಚಂಚಲ ಮನಸ್ಸನ್ನು ನಿಯಂತ್ರಿಸಲು ಯೋಗ ಸಹಕಾರಿಯಾಗಿದ್ದು,ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ಹೊಂದಬಹುದಾಗಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಮನಸ್ಸು ಮತ್ತು ದೇಹದ ಸಂಯೋಜನೆಯೇ ಯೋಗವಾಗಿದೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಸಂಯೋಜನೆ, ನಮ್ಮ ಮತ್ತು ನಮ್ಮ ಪ್ರಕೃತಿಯೊಂದಿಗಿನ ಸಂಯೋಜನೆ,ಯೋಗದಿಂದ ಬಹಳಷ್ಟು ಲಾಭವಿದೆ. ವಿದ್ಯಾರ್ಥಿ ಪ್ರತಿದಿನ ಕನಿಷ್ಠ ಇಪ್ಪತ್ತು ನಿಮಿಷವಾದರೂ ಯೋಗ ಮಾಡುವ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ದೃಢತೆ ಹೊಂದಬೇಕು.ಶಿಕ್ಷಣದ ಜೊತೆಗೆ ಸಹಪಠ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ವಿದ್ಯಾರ್ಥಿಗಳು ಆಸಕ್ತಿ, ಚಟುವಟಿಕೆಯಿಂದಿರುವ ಮೂಲಕ ಚೆನ್ನಾಗಿ ಓದಿ, ನಮ್ಮ ಜಿಲ್ಲೆ, ರಾಜ್ಯ ಈ ದೇಶಕ್ಕೆ ಹೆಸರು ತರಬೇಕು ಎಂದು ಹೇಳಿದರು.
ಎಕ್ಸೆಲೆಂಟ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಕೌಲಗಿ ಮಾತನಾಡಿ, ಯೋಗದಿಂದ ಏಕಾಗ್ರತೆ,ನೆನಪಿನ ಶಕ್ತಿ ವೃದ್ಧಿ, ಉತ್ತಮ ಆರೋಗ್ಯ ಹೊಂದಲು ಯೋಗ ಪರಿಹಾರ ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಯೋಗ ದಿನಚರಿಯ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಚಾಣಕ್ಯ ಕರಿಯರ ಅಕಾಡೆಮಿಯ ಸಂಸ್ಥಾಪಕ ಅದ್ಯಕ್ಷರಾದ ಎನ್.ಎಂ.ಬಿರಾದಾರ ಅವರು ಮಾತನಾಡಿ, ವಿದ್ಯಾರ್ಥಿಗಳು ಮನಸ್ಸಿನ ನಿಯಂತ್ರಣಕ್ಕೆ ಯೋಗ ಮತ್ತು ಧ್ಯಾನ ರೂಢಿಸಿಕೊಳ್ಳಬೇಕು. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ನೋಂದಣಿ (ರಜಿಸ್ಟರ್ಡ), ಧಾರಣಾ, ಸಂಯೋಜನೆ ಹಾಗೂ ರಿಕಾಲ್ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಬಾಲಗಾಂವ್ ಗುರುದೇವ ಆಶ್ರಮದ ಪರಮಪೂಜ್ಯ ಶ್ರೀ ಅಮೃತಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿದರು.
ಕ್ರೀಡಾಧಿಕಾರಿ ರಾಜಶೇಖರ ದೈವಾಡಿ ಅವರು ನಿರೂಪಿಸಿದರು. ಶ್ರೀಧರ ಜೋಶಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಾಲ ವಿಕಾಸ ಅಕಾಡೆಮಿಯ ನಿರ್ದೇಕರುಗಳಾದ ಎಚ್ ವೈ ಯರಾಳಿ,ಶ್ರೀನಿವಾಸ ಸೊರಟೂರ,ಚಿನ್ನಕ್ಕ ಬಿರಾದರಾ,ಬಾಲ ವಿಕಾಸ ಅಕಾಡೆಮಿಯ ಉಪ ನಿರ್ದೇಶಕರು ರವಿ ರತ್ನಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ, ಗುಲಬುರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಯೋಗ ಗುರುಗಳಾದ ಜ್ಯೋತ್ಸ್ನಾ ಆರ್ ಅಂಬೇವಾಡ್ಕರ್, ಸಮಾಜ ಕಲ್ಯಾಣ ಇಲಾಖೆಯ ಪುಂಡಲಿಕ ಮಾನವರ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಆಯುಷ್ ಇಲಾಖೆಯ ಅಧಿಕಾರಿ ವಿದ್ಯಾವತಿ ಅಥಣಿ, ಬಿಇಒ ಬಸವರಾಜ ತಳವಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು,ಬಾಲ ಯೋಗಾಸಕ್ತರು, ಯೋಗಪಟುಗಳು, ಯೋಗ ಗುರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
*ರೋಮಾಂಚನಗೊಳಿಸಿದ ಯೋಗ ಪ್ರದರ್ಶನ*
ರಾಜ್ಯದ ಮೂಲೆ- ಮೂಲೆಯಿಂದ ಆಗಮಿಸಿದ ಯೋಗಪಟುಗಳು ಕಂದಗಲ್ ಹನುಮಂತರಾಯ ರಂಗ ಮಂದಿರ ವೇದಿಕೆಯಲ್ಲಿ ನಡೆದ ಯೋಗ ಪ್ರದರ್ಶನ ಮೈನವಿರೇಳಿಸುವುದರೊಂದಿಗೆ ರೋಮಾಂಚನಗೊಳಿಸಿತು. ಯೋಗಪಟುಗಳ ಒಂದೊಂದು ಯೋಗಕ್ಕೆ ಸಭೀಕರು ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸುತ್ತಿದ್ದರು. ಕೌತುಕ ಹಾಗೂ ಕುತೂಹಲ ಅಲ್ಲಿ ಮನೆ ಮಾಡಿತ್ತು. ಅದ್ಭುತ ಯೋಗ ಪ್ರದರ್ಶನ ನೀಡಿದ ಯೋಗ ಪಟುಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.



ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ